ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)



ಶಿವ ಸಂಕಲ್ಪ ಸೂಕ್ತ ( ಶುಕ್ಲಯಜುರ್ವೇದ, ವಾಜಸನೇಯ ಸಂಹಿತಾ)


ಪ್ರಸ್ತಾವನೆ :

ಈ ಸೂಕ್ತವು ಒಂದು ದೈವೀ ಗೀತೆ. ಶಿವ ಸಂಕಲ್ಪವೆಂದರೆ (&) - ಸರಿಯಾದ ಉದ್ದೇಶ ಅಥವಾ ಪವಿತ್ರ ನಿರ್ಧಾರವನ್ನು ಹೊಂದುವುದು. ಶಿವ ಸಂಕಲ್ಪಸೂಕ್ತವನ್ನು ವೇದಕಾಲದ ಮಹರ್ಷಿಗಳು ವೇದದಲ್ಲಿ ಸ್ತುತಿಸಿದ್ದಾರೆ. ಇದು ಕೇವಲ ಮನಸ್ಸಿನ ದೈವೀ ಶಕ್ತಿಗೆ ಮಾತ್ರ ಸಂಬಂಧಿಸಿದುದು. ಶಿವ ಸಂಕಲ್ಪ ಸೂಕ್ತವು " ದೈವೀ ಶಕ್ತಿಯಿಂದ ಪರಿಪೂರ್ಣವಾಗಿರುವ ಮನಸ್ಸಿಗೆ ಸಂಬಂಧಿಸಿದ ಸ್ತುತಿ ಮತ್ತು ಅದರ ಉಪಕೃತನು" ಎಂಬುದು ಸರ್ವವಿದಿತ. ಯಜುರ್ವೇದದ ಕಣ್ವ ಪರಿಷ್ಕರಣೆಯಲ್ಲಿನ 33 ನೇ ಅಧ್ಯಾಯದಲ್ಲಿ ಮೊದಲನೇ ಶ್ಲೋಕ ಮಾತ್ರ ಇರುವುದು. ಶಿವ ಸಂಕಲ್ಪ ಸೂಕ್ತದ ಉಳಿದ ಆರು ಶ್ಲೋಕಗಳು ಶುಕ್ಲ ಯಜುರ್ವೇದದ ವಾಜಸನೇಯಿ ಸಂಹಿತೆಯ 34 ನೇ ಅಧ್ಯಾಯದಲ್ಲಿನ ಭಾಗವಾಗಿದೆ. ಇವುಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಸಿದ್ದ ಸೂಕ್ತಇದಲ್ಲದೇ ಸಾಮಾನ್ಯವಾಗಿ ಯಾರಿಗೂ ತಿಳಿಯದೇ ಇರುವ ಸಂಗತಿಯೆಂದರೆ ಋಗ್ವೇದದ ಖಿಲ ಸೂಕ್ತದ 33 ನೇ ಅಧ್ಯಾಯದಲ್ಲಿ ಶಿವ ಸಂಕಲ್ಪ ಸೂಕ್ತದ 26 ಮಂತ್ರಗಳೂ ಇರುವುದು. ಪ್ರಸ್ತುತ ಶಿವ ಸಂಕಲ್ಪ ಸೂಕ್ತದ ಆರು ಶ್ಲೋಕಗಳಿಗೆ ಮಹಾನ್ ಆಚಾರ್ಯರುಗಳಾದ ಸಾಯಣರು, ಉವ್ವತರು, ಮಹೀಧರರು ಹಾಗೂ ಸ್ವಾಮಿ ದಯಾನಂದ ಸರಸ್ವತಿಗಳು ವ್ಯಾಖ್ಯಾನಗಳನ್ನು ರಚಿಸಿದ್ದಾರೆ.

ಈ ಆರು ಶಿವ ಸಂಕಲ್ಪ ಮಂತ್ರಗಳು ರುದ್ರಾಷ್ಟಾಧ್ಯಾಯಿಯ ಮೊದಲನೇ ಅಧ್ಯಾಯದಲ್ಲೂ ವಿವರಿಸಲಾಗಿದೆ. ಈ ಶಿವ ಸಂಕಲ್ಪ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಬಹುದು. ಇದರ ಮೂಲಕ ಮನಸ್ಸಿನ ಉಪಪ್ರಜ್ಞೆಯನ್ನು ( ಚಿತ್ತ ) ಮತ್ತು ಯೋಚನೆಯ ಸಹಜ ಶಕ್ತಿಯನ್ನೂ ಸಹ ಹತೋಟಿಯಲ್ಲಿಟ್ಟುಕೊಳ್ಳುವ ವಿಧಾನ.

ಈ ಕೆಳಗೆ ವಿವರಿಸಿರುವ ಶ್ಲೋಕಗಳಿಗೆ ವಿವರ / ವ್ಯಾಖ್ಯಾನಗಳು ಸಮಗ್ರವಾದದ್ದಲ್ಲ ಬದಲಿಗೆ ಕೇವಲ ವಿವರಣಾತ್ಮಕವಾದದ್ದು ಮಾತ್ರ. ಇದರ ನೈಜ ಅಂತರಾರ್ಥವು ಆಳವಾಗಿ ಧ್ಯಾನದ ಮೂಲಕ ಅವಲೋಕಿಸುವ ಮುನಿಗಳಿಗೆ ಮಾತ್ರ ವೇದ್ಯವಾಗುವುದು. ಧ್ಯಾನ ಕ್ರಿಯೆಯು ತನ್ನ ಅನೇಕ ಹಂತಗಳು ಹಾಗೂ ಸ್ಥಿತಿಗಳ ಮೂಲಕ ಮುಂದುವರೆಯುತ್ತಿದ್ದಂತೆ ಈ ಶ್ಲೋಕಗಳ ಅಂತರಾರ್ಥಗಳು ಅನಾವರಣಗೊಳ್ಳುತ್ತವೆ.

ಯಾವುದೇ ಮಂತ್ರಗಳನ್ನು ಅದಕ್ಕೆ ಸಂಬಂಧಿಸಿದ ಋಷಿ ಮುನಿಗಳನ್ನು ಕಾಲಜ್ಞಾನಿಗಳನ್ನು ಮತ್ತು ಅದರ ದೈವವನ್ನು ಹಾಗೂ ದೈವೀ ಜಾಗ್ರತ ಶಕ್ತಿಗಳನ್ನು ಭಕ್ತಿಪೂರ್ವಕವಾಗಿ ನೆನಸಿಕೊಳ್ಳದೇ ಪಠಿಸಲಾಗುವುದಿಲ್ಲಅನೇಕ ಸಂದರ್ಭಗಳಲ್ಲಿ ಕೃತಿಯನ್ನು  ರಚಿಸಿದ ನೈಜ ಮುನಿಗಳನ್ನು ಗುರುತಿಸಲಾಗದೇ ಇರಬಹುದು ಏಕೆಂದರೆ ಅವರುಗಳು ತಮ್ಮ ಕೃತಿಯಲ್ಲಿ ಬರುವ ವಿಷಯಗಳನ್ನೇ ಗಣನೆಗೆ ತೆಗೆದುಕೊಂಡಿರುತ್ತಾರೆ. ಹಾಗಾಗಿ ಯಜುರ್ವೇದದ 34ನೇ ಅಧ್ಯಾಯದಲ್ಲಿನ ಶಿವ ಸಂಕಲ್ಪದ ಮೊದಲ ಆರು ಶ್ಲೋಕಗಳನ್ನು ಶಿವ-ಸಂಕಲ್ಪವೆಂದೇ ಹೆಸರಿಸಿ ಅದರ ದೈವವನ್ನು ಮನಸ್ಸೆಂದು ಪರಿಗಣಿಸಲಾಗಿದೆ. ಋಗ್ವೇದದ ಖಿಲ-ಸೂಕ್ತಗಳಲ್ಲಿ ಬರುವ 20 ಶ್ಲೋಕಗಳ ಕರ್ತೃವು ಯಾರೆಂದು ತಿಳಿಯದು.

& = ಶಿವ ಸಂಕಲ್ಪ ಸೂಕ್ತ - ವೇದಗಳಲ್ಲಿ ಬರುವ ಶ್ಲೋಕಗಳನ್ನು ಅದರಲ್ಲಿ ಎಷ್ಟು ಮಂತ್ರಗಳಿದ್ದರೂ - ಕೀರ್ತನೆಗಳಲ್ಲಿನ ಚರಣಗಳಂತೆ ಪರಿಗಣಿಸಲಾಗುವುದು. ವೇದಕಾಲಾನಂತರದ ಸ್ತುತಿಪಾಠಗಳಿಗೆ ಸೂಕ್ತ ಎಂಬ ಪದವನ್ನು ಉಪಯೋಗಿಸುವುದಿಲ್ಲ, ಬದಲಾಗಿ ಅವುಗಳನ್ನು ಸ್ತೋತ್ರವೆನ್ನಲಾಗುವುದು. ಮತ್ತೊಂದು ವಿವರಣೆಯೆಂದರೆ ಮಂತ್ರ ರೂಪಿ ಪದ್ಯಗಳನ್ನು ಸೂಕ್ತವೆಂದೂ ನಾಮರೂಪೀ ಪದಗಳಿಂದ ದೈವವನ್ನು ಹೊಗಳುವ / ಸ್ತುತಿಸುವುದಕ್ಕೆ ಸ್ತೋತ್ರಗಳೆಂದೂ ವರ್ಗೀಕರಿಸಬಹುದೆಂಬುದಾಗಿ.

ಶ್ಲೋಕ - 1 - ಸಂಸ್ಕೃತದಲ್ಲಿ

ಯಜ್ಜಾಗ್ರತೋ ದೂರಮುದೈತಿ
ದೈವಂ ತದು ಸುಪ್ತಸ್ಯ ತಥೈವೈತಿ
ದೂರಾಂಗಮಂ ಜ್ಯೋತಿಷಂ ಜ್ಯೋತಿರೇಕಂ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ಎಚ್ಚರದಿ ದೂರ ತನಿನಿದ್ದೆಯಲಿ
ಬಳಿಯಿದ್ದು ಬುದ್ಧಿಮನ ಬೆಳಗುವ
ಜ್ಯೋತಿಗಳೊಂದೆ ಮೂಲ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಎಚ್ಚರ ಸ್ಥಿತಿಯಲ್ಲಿರುವ ಆ ಮನಸ್ಸು ಇಂದ್ರಿಯಗಳ ಮೂಲಕ ಈ ಪ್ರಪಂಚದೊಳಗೆ (1) ಸಂಚರಿಸುತ್ತದೆ, ಮತ್ತು ಅದು ಸ್ವಪ್ನಾವಸ್ಥೆಯಲ್ಲಿ ಅನೇಕ ಪ್ರಪಂಚಗಳಲ್ಲಿ (2) ಸಂಚರಿಸುವುದು ಹಾಗೂ ದೀರ್ಘ ನಿದ್ರಾವಸ್ಥೆಯಲ್ಲಿ ಅದು ತನ್ನ ಸ್ವಸ್ಥಾನಕ್ಕೆ ಮರಳುವುದು (3), ಅಲ್ಲಿಯವರೆಗೂ ಸಂಚರಿಸುವ, ಜ್ಞಾನಜ್ಯೋತಿಯು (4) ನನ್ನ ಮನಸ್ಸೇ, ನಿನಗೆ ಸದಾ ಒಳ್ಳೆಯ ಉದ್ದೇಶವಿರಲಿ (5).
(1) = ಕಣ್ಣುಗಳು ಹಾಗೂ ಕಿವಿಗಳು ಮಾಹಿತಿಯನ್ನು ನಮೂದಿಸಿದರೂ ಕೇವಲ ಮನಸ್ಸು ಮಾತ್ರ ಇವುಗಳಿಗೆ ಅರ್ಥವನ್ನು ನೀಡುತ್ತದೆ.
(2) = ಈ ಪ್ರಪಂಚದಲ್ಲಿ ಎಷ್ಟರ ಮಟ್ಟಿಗೆ ಅಪೂರ್ವವಾದ ಹಾಗೂ ಸುಂದರವಾದ ವಿಷಯಗಳಿರುವುದೋ ಅದಕ್ಕಿಂತ ಸಾವಿರ ಪಟ್ಟು ಕಲ್ಪನೆಯಲ್ಲಿ ಬರಬಹುದು.
(3) = ದೀರ್ಘ ನಿದ್ರೆಯಲ್ಲಿ ಇಂದ್ರಿಯಗಳು ಮನಸಿನೊಳಗೆ ಹಿಂತೆಗೆದುಕೊಳ್ಳುವುದು, ಮತ್ತು ಮನಸ್ಸು ಆತ್ಮನಲ್ಲಿ ಸರಿಯುವುದು ಆಗ ಪರಮಾನಂದ ಮತ್ತು ಬ್ರಹ್ಮನ ಪ್ರಶಾಂತತೆಯನ್ನು ಸ್ವಲ್ಪಮಟ್ಟಿಗೆ ಅನುಭವಿಸಬಹುದು. ಆದರೆ ಉಳಿದವೆರಡು ಸ್ಥಿತಿಗಳಂತೆ ಈ ಪ್ರಶಾಂತತೆಯು ಕ್ಷಣಿಕವಾದದ್ದು ಮತ್ತು ಅಸ್ಥಿರವಾದದ್ದು ಹಾಗಾಗಿ ಈ ಅನುಭವವು ನೈಜಬ್ರಹ್ಮ ಜ್ಞಾನಕ್ಕೆ ತೀರ ಸಾಧಾರಣ ಬದಲಿ ಸ್ಥಿತಿ.
(4) = ಮನಸ್ಸು ಒಂದು ರೀತಿಯ ಬೆಳಕು ಹಾಗೂ ಅದು ಅಜ್ಞಾನದ ಕತ್ತಲನ್ನು ಜ್ಞಾನದ ಮೂಲಕ ಪ್ರಕಾಶಿಸುತ್ತದೆ.
(5) = ಶಿವಸಂಕಲ್ಪ. ಅಲೆದಾಡುವ ಮನಸ್ಸು ಎಲ್ಲ ದುಃಖಗಳಿಗೂ ಕಾರಣ, ಆದರೆ ಅದನ್ನು ಸರಿಯಾದ ಗುರಿಯೆಡೆಗೆ ತಿರುಗಿಸಿದಾಗ ಅದು ಬಂಧನದಿಂದ ಬಿಡುಗಡೆ ಹೊಂದಲು ಕಾರಣವಾಗುವುದು.

ವ್ಯಾಖ್ಯಾನ - 1.

ನಾನು ಆತ್ಮ ಅಂದರೆ ಜ್ಞಾನನಾನು ಪುರುಷ, ಶರೀರ ಮತ್ತು ಪ್ರಕೃತಿಯಲ್ಲಿ ನೆಲೆಸಿರುವವನು.
ನನಗೆ ಮನಸ್ಸು ಎಂಬುದೊಂದಿದೆ.
ಈ ನನ್ನ ಮನಸ್ಸು ಸೂರ್ಯನಂತೆ ಉದಯಿಸುತ್ತದೆ. ಅದು ನನ್ನ ಇಂದ್ರಿಯಗಳನ್ನು ಮೀರಿ ಅವುಗಳಿಂದ ಬಹು ದೂರ ಪಯಣಿಸುತ್ತದೆ. ನನ್ನ ಎಚ್ಚರ ಸ್ಥಿತಿಯಲ್ಲಿ ಅದು ಸಂಚರಿಸುತ್ತಾ ಇಂದ್ರಿಯಗಳೊಂದಿಗಿನ ಸಂಪರ್ಕದಿಂದ ಬಹುದೂರದ ವಸ್ತುಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.
ಹಾಗೆಯೇ ನನ್ನ ಮನಸ್ಸು ಮರೆಮಾಡಲ್ಪಟ್ಟ, ಭೂತ, ಭವಿಷ್ಯದ, ಹಾಗೂ ವರ್ತಮಾನಗಳ, ತೀರ ಹತ್ತಿರದ, ಅಥವಾ ಅತಿ ದೂರದ, ವಸ್ತುಗಳ ಬಳಿಗೆ ತನ್ನ ಪರಿಧಿಯಲ್ಲೇ ಇರುವಂತೆ ತಲುಪುವುದು.

ಅದೇರೀತಿ ಕನಸು ಕಾಣುತ್ತಿರುವವನ ಮನಸ್ಸು ಕೂಡಾ. ಅದು ದೂರದ ವಸ್ತುಗಳು, ವಸ್ತುಗಳು ಚಿನ್ಹೆಯ ರೂಪ ಮತ್ತು ಮುದ್ರಣಗಳ ರೂಪದಲ್ಲಿ ಅಡಗಿರುವ ವಾಸನಾಮಯ ಪದಾರ್ಥಗಳೆಡೆಗೆ ಪಯಣಿಸುವುದು.
ಹೇಗೆ ಮನಸ್ಸು ನಿದ್ರಾಸ್ಥಿತಿ ಹಾಗೂ ಕನಸಿನ ಸ್ಥಿತಿಯಲ್ಲಿ ಯಾವುದೇ ಮಾರ್ಗದಲ್ಲಿ ಪದಾರ್ಥಗಳೆಡೆಗೆ ಪಯಣಿಸುವುದೋ, ಎಚ್ಚರದ ಸ್ಥಿತಿಗೆ ಬರುವಷ್ಟರಲ್ಲಿ ಅದೇ ಮಾರ್ಗದಲ್ಲಿ ಎಚ್ಚರದ ಸ್ಥಿತಿಯಲ್ಲಿ ಮನಸ್ಸು ಎಲ್ಲಿತ್ತೋ ಅಲ್ಲಿಗೇ ಮರಳುವುದು.
ನಿದ್ರಾ ಸ್ಥಿತಿಯಲ್ಲಿರುವವನ ಮನಸ್ಸು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಆಧ್ಯಾತ್ಮದ ಜ್ಞಾನ ಅಥವಾ ಆತ್ಮನ್ ಬಳಿಗೆ ಅದು ಸಾಮಾನ್ಯವಾಗಿ ಅತಿ ದೂರದಲ್ಲಿರುವಂತೆ ಯೋಚಿಸಿ ಅಲ್ಲಿಗೆ ತಲುಪಿ ಅದರೊಂದಿಗೆ ಲೀನವಾಗಿ ಒಗ್ಗೂಡುತ್ತದೆ.
ಈ ದೈವೀ ಮನಸ್ಸೇ ಪರಮಾನಂದದೆಡೆಗಿನ ಮಾಧ್ಯಮ.

"ದಿವಶ್ಚೈನಮಾದಿತ್ಯಶ್ಚ ದೈವಂ ಮನ ಆವಿಷತಿ; ತದೈ ದೇವಂ ಮನೊ ಯೇನಾನಂಧೇವ ಭವತಿ, ಅಥೊ ನ ಶೋಚತಿ ||" ಬೃಹದಾರಣ್ಯಕೋಪನಿಷತ್ 1-5-19

ಸ್ವರ್ಗದಿಂದ ದೈವೀ ಮನವು ಮತ್ತು ಸೂರ್ಯನು ಅವನಲ್ಲಿ ಹರಡಿಕೊಳ್ಳುವುದು. ಆ ದೈವೀ ಮನದ ಮೂಲಕ ಅವನು ಸಂತೋಷವನ್ನು ಹೊಂದುತ್ತಾನಲ್ಲದೇ ಎಂದಿಗೂ ದುಃಖಿಸುವುದಿಲ್ಲ.

ಮನುಷ್ಯನಲ್ಲಿರುವ ದೈವತ್ವವೇ ಆತ್ಮದ - ಅರಿವು. ಇದರಲ್ಲಿ ಮನಸ್ಸು ನೆಲಸಿರುವುದು ಮತ್ತು ಈ ಮಾಧ್ಯಮದ ಮೂಲಕ ಆತ್ಮದ ಅರಿವನ್ನು ಗ್ರಹಿಸುವುದು; ಹಾಗಾಗಿ ಇದು ಪ್ರಕಾಶಿಸುವ, ದೇವದೂತ, ದೈವೀ ಮನಸ್ಸುಹೀಗೆಂದು ಈ ಕೆಳಗಿನ ಶ್ಲೋಕದಲ್ಲಿ ವಿವರಿಸಲಾಗಿದೆ:

"ಮನಸೈವಾನುದ್ರಷ್ಟವ್ಯಮ್, ನೇಹ ನಾನಾಸ್ಥಿ ಕಿಂಚನ |
ಮೃತ್ಯೋಃ ಸ ಮೃತ್ಯುಮಾಪ್ನೋತಿ ಯ ಇಹ ನಾಮೇವ ಪಶ್ಯತಿ ||" ಬೃಹದಾರಣ್ಯಕೋಪನಿಷತ್ 4.4.19

ಮನಸ್ಸಿನ ಮೂಲಕ ಮಾತ್ರ ಇದನ್ನು ಅರಿಯಬೇಕು. ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರಲ್ಲಿರುವ ವ್ಯತ್ಯಾಸವನ್ನು ಮೃತ್ಯುವಿನಿಂದ ಮೃತ್ಯುವೆಡೆಗೆ ಪಯಣಿಸಿದಾಗ ಅರಿಯುವುದು.

ಬ್ರಹ್ಮನನ್ನು ಅರಿಯುವ ಮಾರ್ಗಗಳನ್ನು ವಿವರಿಸಲಾಗಿದೆ. ಇದನ್ನು ಅರಿಯಬೇಕಾದರೆ ಗುರುವಿನ ಬೋಧನೆಯ ಪ್ರಕಾರ ಮತ್ತು ಪರಮ ಸತ್ಯದ ಜ್ಞಾನದಿಂದ ಪರಿಶುದ್ಧವಾದ ಮನಸ್ಸಿನ ಮೂಲಕ ಮಾತ್ರ ಸಾಧ್ಯ. ಬ್ರಹ್ಮನ್ - ವಸ್ತುವಿನ ಸಾಕ್ಷಾತ್ಕಾರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಅಜ್ಞಾನದಿಂದ ಇವುಗಳು ಅಧ್ಯಾರೋಪಗೊಳ್ಳಬಹುದು.
ಇದನ್ನು ಬೆಳಕೆಂದು ಕರೆಯಬಹುದು ಹಾಗೂ ಇದು ಪ್ರಕಾಶಿಸುವ ಸಾಧನ ಮತ್ತು ಇಂದ್ರಿಯಗಳ ಕಾರ್ಯ ಹಾಗೂ ಇವುಗಳು ಪ್ರತಿಯೊಂದು ಕ್ಷೇತ್ರಗಳ ಅರಿವಿನ ರೀತಿ.
ಇಂದ್ರಿಯಗಳ ಬೆಳಕಿನಲ್ಲಿ ಇದು ಒಂದು ಬೆಳಕು ಹಾಗೂ ಇದು ಅನುಭವದ ಅರಿವು ಮತ್ತು ಜ್ಞಾನದೆಡೆಗೆ ಕೊಂಡೊಯ್ಯುತ್ತದೆ.
ಮುಂದುವರೆದು - ಈ ಇಂದ್ರಿಯಗಳಲ್ಲಿ ಮನಸ್ಸೇ ನಿಜವಾದ ಬೆಳಕು, ಅನೇಕ ಬೆಳಕುಗಳಿಗೆ ಬೆಳಕು, ಪ್ರಕಾಶಿಸುವ, ಆ ಬೆಳಕು ಪ್ರವರ್ತಕಕ್ಕೆ ಪ್ರಚೋದಿಸುತ್ತದೆ.
ಆತ್ಮವು ಮನಸ್ಸಿನೊಂದಿಗೆ ಸೇರುತ್ತದೆ; ಮನಸ್ಸು ಇಂದ್ರಿಯಗಳೊಂದಿಗೆ, ಇಂದ್ರಿಯಗಳು ಅವುಗಳ ವಸ್ತುಗಳೊಂದಿಗೆ ಸೇರುವುದು - ಹೀಗೆ ನ್ಯಾಯ ಶಾಸ್ತ್ರವು ವಿವರಿಸುವುದು. ಮನಸ್ಸಿನೊಡನೆ ಸಂಪರ್ಕವಿಲ್ಲದೆ ಅವುಗಳು ಕಾರ್ಯವಹಿಸುವುದಿಲ್ಲ.

ಜೀವನದ ನಂತರದ ಸ್ವರ್ಗೀಯವಾದ ಫಲಗಳೆಡೆಗೆ ನನ್ನ ಮನವು ನಿರ್ಧರಿಸಲಿ ಮತ್ತು ನೆಮ್ಮದಿ, ಪ್ರಸ್ತುತ ಜೀವನದ ಆಯ್ಕೆಯಾಗಲಿ. ಇದು ಸರಿಯಾದ ರೀತಿಯಲ್ಲಿ ಅಂದರೆ ಸ್ವರ್ಗೀಯ ಮತ್ತು ಪ್ರಾಪಂಚಿಕ ಲಾಭಗಳನ್ನು ಹೊಂದಲು ಸಹಕರಿಸಲಿ.

ಧರ್ಮವನ್ನು ಒಂದು ಗುರಿಯಾಗಿಟ್ಟುಕೊಂಡು, ಅದರ ತೀರ್ಮಾನ ಮತ್ತು ಒಲವು ಸದಾ ಫಲಪ್ರದವಾಗಲಿ.
ನನ್ನ ಮನಸ್ಸಿನಲ್ಲಿ ಸದಾ ಧರ್ಮವೇ ನೆಲೆಸಿರಲಿ ಮತ್ತು ಯಾವುದೇ ಸಂದರ್ಭದಲ್ಲೂ ಪಾಪಪ್ರಜ್ಞೆ ಉಂಟಾಗದಿರಲಿ.
ಆ ಮನಸ್ಸು, ಇಂದ್ರಿಯಗಳಿಗೆ ಏಕರೂಪದ ಕಾರಣಗಳನ್ನು ಅವಲಂಬಿಸದೆ , ನನ್ನ ಕ್ಷೇತ್ರವನ್ನು ಅರಿತ, ಎಲ್ಲ ಕಾರ್ಯಗಳ ಉಪಾಧಿಗಳು ಕೇವಲ ಶಿವ-ಸಂಕಲ್ಪವಾಗಿರಲಿ.
ಇವುಗಳು ಸಂಪೂರ್ಣವಾಗಿ ಸೂಕ್ತದ ಕ್ರಿಯೆಯ ಉದ್ದೇಶವಾಗಿರಲಿ.
ಸಂಕಲ್ಪವೆಂಬುದು ನಮಗಿಷ್ಟವಾದ ಆಕರ್ಷಣೆ - ಉದಾಹರಣೆ - ವಿರುದ್ಧ ಲಿಂಗ; ನನ್ನ ಮನವು ಶಮನಪೂರಿತ ವಿಶ್ರಾಂತಿಯೆಡೆಗೆ ಕೇಂದ್ರೀಕೃತವಾಗಿರಲಿ.
ಅದರಿಂದ - ನನ್ನ ಮನವು, ಏಕಮೇವ ಬ್ರಹ್ಮಾನಂದ, ಪರಮೋಚ್ಛ ಜ್ಞಾನ; ಶಿವನಲ್ಲಿ ಐಕ್ಯವಾಗಲಿ ಹಾಗೂ ಬ್ರಹ್ಮಜ್ಞಾನವನ್ನು ಸ್ಥಾಪಿಸಿ ಅಲ್ಲೇ ನೆಲಸಲಿ.

ಶ್ಲೋಕ - 2 - ಸಂಸ್ಕೃತದಲ್ಲಿ

ಯೇನ ಕರ್ಮಾನ್ಯಪಸೋ ಮನೀಷಿಣೋ
ಯಜ್ಞೇ ಕೃಣ್ವಂತಿ ವಿದತೇಷು ಧೀರಾಃ
ಯದಪೂರ್ವಂ ಯಕ್ಷ್ಮಂತಃ ಪ್ರಜಾನಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ಯಜ್ಞಯಾಗಾದಿಗಳ ಹವಿ
ಪಂಡಿತರಿಂದಾರ್ಗೆ ಸಲುವುದೊ
ಸರ್ವಜೀವರಲಂತರ್ಯಾಮಿಯಹುದೇನೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಇಂದ್ರಿಯಗಳು ಸ್ಥಿರವಾಗಿ ಮತ್ತು ವಿವೇಕವುಳ್ಳ ಹಾಗೂ ಯಜ್ಞ ಕಾರ್ಯಗಳಲ್ಲಿ  ಮತ್ತು ಶಾಸ್ತ್ರಗಳಲ್ಲಿ ವಿವರಿಸಲ್ಪಟ್ಟ ಇತರ ಕರ್ಮಗಳಲ್ಲಿ ನಿಪುಣ ಮತ್ತು ಶ್ರದ್ಧೆಯುಳ್ಳ  ಮತ್ತು ಪೂಜಿಸಲ್ಪಟ್ಟ ಹಾಗೂ ಬಹು ಮುಖ್ಯವಾದ  ಜ್ಞಾನ ಮಾರ್ಗದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು (ಕರ್ಮನಿಷ್ಠ - ಕರ್ಮದಲ್ಲೆ ಸದಾ ಮುಳುಗಿರುವ ) ನನ್ನ ಮನಸ್ಸಿನಲ್ಲಿ ಸದಾ ಸದ್ಭಾವನೆಗಳೇ ತುಂಬಿರಲಿ.

ವ್ಯಾಖ್ಯಾನ :

ಮನಸ್ಸು ಆರೋಗ್ಯವಾಗಿ ಮತ್ತು ಸ್ವಯಂ-ಸ್ಥಿರತೆಯಿಂದಿಲ್ಲವಾದಲ್ಲಿ ( ಸ್ವ-ಸ್ಥ, - ಆರೋಗ್ಯಕ್ಕೆ ಸಾಮಾನ್ಯವಾಗಿ ಉಪಯೋಗಿಸುವ ಪದವು ಸ್ವ-ಸ್ಥಿರವಾದ, ಕ್ರಿಯಾವಂತನಲ್ಲಿ ನೆಲೆಸಿರುವ ನೈಜ ಸ್ವಭಾವ ) ಯಾವ ಕ್ರಿಯೆಗಳೂ ಸಮಗ್ರವಾಗಿರುವುದಿಲ್ಲ ಇಲ್ಲವೇ ಸರಿಯಾದ ಕ್ರಿಯೆಗಳಾಗಿರುವುದಿಲ್ಲ. ದಿವ್ಯ ಮತ್ತು ಪವಿತ್ರ ಕ್ರಿಯೆಗಳನ್ನು ಮನಸ್ಸಿಲ್ಲದೇ ಮಾಡಲಾಗುವುದಿಲ್ಲ, ಮತ್ತು ಈ ಕ್ರಿಯೆಗಳನ್ನು ಜ್ಞಾನವು ಮೊದಲೇ ಉದಯಿಸದೇ ಮಾಡಲಾಗುವುದಿಲ್ಲ.
ಈ ಮನಸ್ಸು ವಿಶಿಷ್ಟವಾದದ್ದು. ಇದು ಇಂದ್ರಿಯಗಳಿಗಿಂತ ಮುಂಚಿತವಾಗಿ ಹಿಂದೆಂದೂ ಕಂಡಿಲ್ಲದ್ದು. ಮನಸ್ಸನ್ನು ಆತ್ಮದರಿವಿನೊಡನೆ ಗುರುತಿಸಬಹುದಾದ್ದರಿಂದ ಇದು ಬಾಹ್ಯವಲ್ಲದ್ದು.
ಕೇವಲ ಈ ಮನಸ್ಸು ಮಾತ್ರ ಸಂಸ್ಕಾರ ಹಾಗೂ ಪವಿತ್ರವಾದದ್ದು. ಇದು ಎಲ್ಲ ಜೀವಿಗಳ ಶರೀರದೊಳಗೂ ನೆಲೆಸಿರುತ್ತದೆ. ಇಂದ್ರಿಯಗಳು ಮಾತ್ರ ಬಾಹ್ಯದಲ್ಲಿ ನೆಲೆಸಿರುವುದು; ಮನಸ್ಸು ಮಾತ್ರವೇ ಅಂತರಂಗದ ಇಂದ್ರಿಯವು.
ಆ ನನ್ನ ಸುಂದರ ಮತ್ತು ದೈವೀ ಮನಸ್ಸು ಸದಾ ಶಿವ-ಸಂಕಲ್ಪದ ಯೋಚನೆಗಳಲ್ಲೇ ತುಂಬಿರಲಿ.

ವ್ಯಾಖ್ಯಾನ - 2

ಸದಾ ಭಗವಂತನ ಮತ್ತು ಸತ್ಪುರುಷರ ಸನ್ನಿದಿಯಲ್ಲೇ ಇರುವುದರಿಂದಾಗಿ, ಯಾರು ಸದಾ ಕರ್ಮನಿರತರಾಗಿರುವ ಇಂಗಿತವುಳ್ಳವರೋ ಅವರ ಮನಸ್ಸು ಹತೋಟಿಯಲ್ಲಿರುವುದು.
ಅವರು ಪ್ರಜ್ಞಾವಂತ ಸಂಪನ್ನ ಧ್ಯಾನಿಗಳು, ಆಜ್ಞಾಪಿಸಿದ ಕ್ರಿಯೆಗಳಾದ ಅಗ್ನಿ ಸಂಸ್ಕಾರ, ಇತರೆ ಧಾರ್ಮಿಕ ಕ್ರಿಯೆಗಳನ್ನು ಮಾಡುತ್ತಾ ಅನುಭವ ಜನ್ಯ ಜ್ಞಾನವನ್ನು ಅನ್ವೇಷಿಸುತ್ತಾ ಅಥವಾ ಯುದ್ಧ ಭೂಮಿಯಲ್ಲಿರುವರು.
ಇಂಥಹ ಕ್ರಿಯೆಗಳಲ್ಲಿ ತೊಡಗಿರುವಾಗ ಮನಸ್ಸು ವಿಶಿಷ್ಟವಾಗಿರುವುದು, ಹಾಗೂ ಅತ್ಯುನ್ನತ ಲಕ್ಷಣಗಳು ಮತ್ತು ಕ್ರಿಯೆಗಳಿಂದ ಆವೃತವಾಗಿರುವುದು. ಇದು ಗೌರವಾತ್ಮಕವಾದದ್ದು, ಎಲ್ಲ ಜೀವಿಗಳ ಹೃದಯದಲ್ಲೂ ಒಗ್ಗೂಡಿರುವುದು. ಚಿಂತನೆಗಳಿಂದ ಕೂಡಿದ ಪ್ರಕ್ರಿಯೆಯೆಂಬುದಾಗಿ ಗುರುತಿಸಲ್ಪಟ್ಟ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಹಾಗೂ ಸದಾ ಧರ್ಮ ಮಾರ್ಗದೆಡೆಗೆ ಒಲವುಳ್ಳದ್ದಾಗಿರಲಿ.
ಮನುಷ್ಯನಿಗೆ ಈ ವರ್ತನೆಗಳು ವಾಸ್ತವಿಕ ಪೂಜೆಗಳ ( ಉಪಾಸನವು ಅತ್ಯುನ್ನತವಾದದ್ದು ಹಾಗೂ  - (i) ಸ್ತುತಿ, ಸ್ತೋತ್ರಗೀತೆ ಅಥವಾ ಪ್ರಶಂಸೆ, (ii) ಪ್ರಾರ್ಥನೆ ಮತ್ತು (iii) ಉಪಾಸನ - ಇಲ್ಲಿ ಇದನ್ನು ವಾಸ್ತವಿಕ ಪೂಜೆಯೆಂದು ಪರಿಗಣಿಸಲಾದ ಮೂರು ಹಂತದ ಪೂಜೆಗಳ ಪೈಕಿ ಆಳವಾದದ್ದು. ಇದರ ಅಕ್ಷರಷಃ ಅರ್ಥವೆಂದರೆ ಭಕ್ತನು ಪ್ರಜ್ಞಾವಂತ ಸ್ಥಿತಿಯಲ್ಲಿ ದೈವದ ಸಮೀಪದಲ್ಲೇ ಕುಳಿತು ಆ ದೈವದ ಇರವಿನ ನೇರ ಅನುಭವವನ್ನು ಹೊಂದುತ್ತಾ, ಆ ದೈವವೇ ತಾನಾಗಿರುವ ಸಾಕ್ಷಾತ್ಕಾರವನ್ನು ಅನುಭವಿಸುವನು ) ಮೂಲಕ, ಸುಂದರವಾದ ಯೋಚನೆಗಳು ಮತ್ತು ಸತ್ಪುರುಷರ ಸಹವಾಸದಿಂದ ತಮ್ಮ ಮನಸ್ಸನ್ನು ಧಾರ್ಮಿಕವಲ್ಲದ ನಡೆಗಳಿಂದ ಧಾರ್ಮಿಕ ನಡಾವಳಿಕೆಗಳೆಡೆಗೆ ಬದಲಾಯಿಸಲು ಸಹಕಾರಿಯಾಗುವುದು.


ಶ್ಲೋಕ - 3 - ಸಂಸ್ಕೃತದಲ್ಲಿ :

ಯೌಪ್ರಜಾನಾಮುತ ಚೇತೋ ದೃಷ್ಟಿಶ್ಚ
ಯಜ್ಯೋತಿರಂತರಾಮೃತಂ ಪ್ರಜಾಸು
ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ಅರಿವಿನ ಸಾರ ಬೆಳಕಿನಂತರ
ಸಕಲ ಜೀವಿಗಳೊಳಗು ಏನಿಲ್ಲ -
ದಾವೊಂದೂ ಚಲಿಸದೊ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ


ವಿವರಣೆ :

ಆ ಮನಸ್ಸು ಇಂದ್ರಿಯಗಳ ಬೇಡಿಕೆಗಳನ್ನು ಕಡೆಗಣಿಸಿ ಕೇವಲ ಜ್ಞಾನದೆಡೆಗೆ ಮಾತ್ರ ಕೇಂದ್ರೀಕರಿಸಿ ಮತ್ತು ವಿಶ್ವದ 
(ಪದಾರ್ಥಗಳು. ಸತ್ಯತೆಯ ಅವಶ್ಯವಾದ ಘಟಕಗಳು. ಬೇರೆ ಬೇರೆ ವೈಚಾರಿಕ ನೆಲೆಗಳು ಇವುಗಳನ್ನು ಬೇರೆಯಾಗಿ ಪರಿಗಣಿಸುತ್ತವೆ) ಮೂಲಧಾತುಗಳನ್ನು ಅರಿತಿರುವ, ನಿರಂತರ ಮತ್ತು ಅಮರ, ಹಾಗೂ ಮನುಷ್ಯನ ಅಂತರಂಗದಲ್ಲಿರುವ ಆದರೆ ಹೊರಗಡೆ ಇರುವುದನ್ನು ಬೆಳಗಿಸುವ ಸಾಮರ್ಥ್ಯವುಳ್ಳದ್ದು, ಹಾಗೂ ಅದಿಲ್ಲದೆ ಯಾವ ಕ್ರಿಯೆಗಳೂ ಅಸಾಧ್ಯವಾದ, ನನ್ನ ಮನಸ್ಸೇ ನಿನ್ನಲ್ಲಿ ಉತ್ತಮವಾದ ಉದ್ದೇಶಗಳಿರಲಿ.

ವ್ಯಾಖ್ಯಾನ :

ಎಲ್ಲ ಜೀವಿಗಳಲ್ಲಿ ವಿಶೇಷವಾದ ಅರಿವನ್ನು ಉತ್ಪತ್ತಿಮಾಡುವ ಮನಸ್ಸು, ಮಹೋನ್ನತ ಜ್ಞಾನವನ್ನು ಹೊಂದಲು ವಿಧಾನ ಮತ್ತು ಮಾಧ್ಯಮ.
ಈ ಮನಸ್ಸು ಸಂಪೂರ್ಣವಾಗಿ ಮತ್ತು ಹೊಂದಿಕೊಳ್ಳುವ ಕಾರಣಗಳು ಸಾಮಾನ್ಯ ಜ್ಞಾನ ( ನೇರವಾದ ಗ್ರಹಿಕೆ ) ಮತ್ತು ವಿಶೇಷವೆರಡರ ಅರಿವು ( ತಾರ್ಕಿಕ ಪ್ರಕ್ರಿಯೆ ); ಇದೇ ಮನಸ್ಸು ಮಹೋನ್ನತ ಜ್ಞಾನವನ್ನು (ಋಷಿ ಮುನಿಗಳು ಮತ್ತು ದಿವ್ಯಜ್ಞಾನದಿಂದ ) ಸ್ವೀಕರಿಸುವ ಮಾಧ್ಯಮ.
ಈ ಮನಸ್ಸು ತಾಳ್ಮೆ ಮತ್ತು ಪುನರುಜ್ಜೀವನ ಶಕ್ತಿಗಳ ಪೋಷಿಸುವ ಒಂದೇ ಬಗೆಯಾದದ್ದು ( ಕಾರ್ಯ-ಕಾರಣಗಳ ವ್ಯತ್ಯಾಸವಿರದ) (ಧೃತಿ ಪದವನ್ನು ಆದಿಶಂಕರಾಚಾರ್ಯರು ತಮ್ಮ ವ್ಯಾಖ್ಯಾನಗಳಲ್ಲಿ -  "ನಮ್ಮಲ್ಲಿನ ಅಂತರಂಗದ ಅರಿವಿನ ಶಕ್ತಿಯಾದ ನಮ್ಮ ಇಂದ್ರಿಯಗಳ ಶಕ್ತಿಯು ಯಾವಾಗ ಸಂಪೂರ್ಣವಾಗಿ ಕ್ಷೀಣವಾಗುತ್ತದೋ, ಅದು ಆದರೂ ಈ ಶಕ್ತಿಯನ್ನು ತನ್ನಲ್ಲೇ ಪುನರುಜ್ಜೀವಿತಗೊಳಿಸಲು ಪ್ರೇರಣೆ ನೀಡುತ್ತದೆಂದು," ಸತತವಾಗಿ ವಾದಿಸುತ್ತಾರೆ. ಈ ಶಕ್ತಿಯ ಮೂಲವು ಮನಸ್ಸಿನಲ್ಲಿರುವುದು ಮತ್ತು ಶಕ್ತಿಯು ಕಾರ್ಯ-ಕಾರಣಗಳೆರಡರ ಪ್ರಭಾವ, ಹಾಗೂ ಒಂದಕ್ಕೊಂದರಂತೆ ಗುರುತಿಸಲಾಗುವುದು).

ಅದೇ ಮನಸ್ಸು ಅಂತರಂಗದ ಅಮರವಾದ ದೀಪವು ಅಂತರಂಗದಲ್ಲಿ ಎಲ್ಲ ಇಂದ್ರಿಯಗಳನ್ನು ಬೆಳಗಿಸುವಂತೆ ಕಾರ್ಯನಿರ್ವಹಿಸುತ್ತದೆ - ಅಮರವಾದದ್ದು, ಎಂದೆಂದಿಗೂ ಸಾವಿಲ್ಲದ್ದು, ಸ್ವಯಂ ಆತ್ಮದೊಂದಿಗೆ ಒಂದಾಗಿರುವುದು.
ಈ ಮನಸ್ಸಿಲ್ಲದೆ ಯಾವುದೇ ಕ್ರಿಯೆಯನ್ನೂ ಮಾಡಲಾಗುವುದಿಲ್ಲ ಏಕೆಂದರೆ ಇದರಲ್ಲಿ ಎಲ್ಲ ತೊಡಗಿಸಿಕೊಳ್ಳುವುದು ಮತ್ತು ಕ್ರಿಯೆಗಳ ಕಾರ್ಯಗಳಿಗೂ ಮುಂಚೆ ಮನಸ್ಸು ಮುಂದಾಗಿರುವುದು. ಈ ಮನಸ್ಸಿನ ಸ್ವಯಂ ಸ್ಥಿರತೆ ಮತ್ತು ಆರೋಗ್ಯವಿಲ್ಲದೆ ಎಲ್ಲ ಸಾಧ್ಯತೆಗಳೂ ಅನೂರ್ಜಿತವಾಗುವುದು.
ಅಂಥಹ ನನ್ನ ಮನಸ್ಸು ಸುಂದರವಾಗಿ ಮತ್ತು ದೈವೀ ನಿರ್ಣಯಗಳಿಂದ ಕೂಡಿ ಶಿವ ಚಿಂತನೆಯಲ್ಲಿ ತುಂಬಿರಲಿ.


ಶ್ಲೋಕ - 4 - ಸಂಸ್ಕೃತದಲ್ಲಿ :

ಯೇನೇದಂ ಭೂತಂ ಭುವನಂ ಭವಿಷ್ಯತ
ಪರಿಗೃಹೀತಮಮೃತೇನ ಸರ್ವಮಾ
ಯೇನ ಯಜ್ಞಸ್ತಾಯತೇ ಸಪ್ತಹೋತಾ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ಯಾವುದೀ ಜಗದ ಭೂತ ಭವಿಷ್ಯ -
ವೆಲ್ಲವನು ಅರಿತಿಹುದೋ
ಸಪ್ತಹೋಮಾದಿಗಳಾವುದರೆಡೆಗೊ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಅದು ಮುಕ್ತಿಯ ( ಮನಸ್ಸು ಸಂಸಾರದೊಂದಿಗೆ ವ್ಯವಹರಿಸುತ್ತದೆ. ಇಷ್ಟೇ ಮುಖ್ಯವಾದದ್ದು ಇದೂ ಕೂಡಾ ಸಂಸಾರದ ಒಂದು ಭಾಗ ಮತ್ತು ಮುಕ್ತಿಯನ್ನು ಹೊಂದಿದ ಕೂಡಲೇ ಇದು ಅಪ್ರಸ್ತುತ ಹಾಗೂ ಅಸ್ಥಿತ್ವದಲ್ಲಿರುವುದಿಲ್ಲ. ) ಗುರಿಯವರೆಗೂ ಅಸ್ಥಿತ್ವದಲ್ಲಿರುವುದು, ವರ್ತಮಾನ ಮತ್ತು ಭವಿಷ್ಯದಲ್ಲಿ ಹಾಗೂ ಇದರ ಮೂಲಕವೇ ಯೋಗಿಗಳು ಅಮರತ್ವವನ್ನು ( ಗತಕಾಲ, ವರ್ತಮಾನ ಮತ್ತು ಭವಿಷ್ಯದ ನೈಜ ಸ್ವಭಾವಗಳನ್ನು ಅರಿತು ಯೋಗಿಗಳು ಸಾವನ್ನು ಗೆಲ್ಲುತ್ತಾರೆ. ) ಪಡೆಯುವರು, ಹಾಗೂ ಇದರ ಮೂಲಕ ಸಪ್ತರ್ಷಿಗಳು (ಅಗ್ನಿಸ್ಥೋಮವೆಂಬ ಯಜ್ಞದಲ್ಲಿ ಏಳು ಪುರೋಹಿತರು (ಹೋತ್ರಿಗಳುಅಥವಾ ಬದಲಾಗಿ ಋಗ್ವೇದದಲ್ಲಿ ವಿವರಿಸಿರುವಂತೆ ಏಳು ಹೋತ್ರಿಗಳು, ಯಜುರ್ವೇದದಲಿ ತಿಳಿಸಿರುವಂತೆ ಏಳು ಅಧ್ವರ್ಯುಗಳು, ಸಾಮವೇದದಲ್ಲಿ ವಿವರಿಸಿರುವಂತೆ ಏಳು ಉದ್ಗತೃಗಳು, ಅಥರ್ವವೇದದಲ್ಲಿ ತಿಳಿಸಿರುವಂತೆ ಏಳು ಬ್ರಾಹ್ಮಣರು, ಯಜ್ಞದ ಯಜಮಾನ ಮತ್ತು ಅವನ ಪತ್ನಿ, ಮತ್ತು ದೇವರ ಹೋತ್ರನಾದ ಸ್ವಯಂ ಅಗ್ನಿ ಮತ್ತು ಕಾಣಿಕೆಗಳನ್ನು ತರುವರು. ಈ ಏಳು ಮಂದಿಯು ಯಾವುದೇ ಶೃತ ಯಜ್ಞದಲ್ಲೂ ಇರಲೇಬೇಕು) ಯಜ್ಞವನ್ನು ನಿರ್ವಹಿಸುತ್ತಾರೆ, ಆ ನನ್ನ ಮನಸ್ಸು ಸದಾ ಸದುದ್ದೇಶಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಮನಸ್ಸು ಯಾವುದರಿಂದ ಎಲ್ಲ ಕಡೆಗಳಿಂದ ಭೂತಕಾಲಕ್ಕೆ ಸಂಬಂಧಿಸಿದ ವಾಸ್ತವಿಕತೆ, ಪ್ರಸ್ತುತದ ಅಸ್ಥಿತ್ವದಲ್ಲಿರುವ ಪ್ರಪಂಚ ಮತ್ತು ಭವಿಷ್ಯತ್ತುಗಳನ್ನು ಗ್ರಹಿಸುವುದು
---  ಮನಸ್ಸು ತ್ರಿಕಾಲಕ್ಕೆ ಸಂಬಂಧಿಸಿದ ವಾಸ್ತವಿಕವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇಂದ್ರಿಯಗಳು ಕೇವಲ ಪ್ರಸ್ತುತ ನೇರ ಗ್ರಹಿಕೆಗೆ ಮಾತ್ರ ಸೀಮಿತವಾಗಿರುತ್ತವೆ
--- ಈ ಮನಸ್ಸು ಅಮರ ಹಾಗೂ ಅವ್ಯಾಹತ
--- ಏಕೆಂದರೆ ಇಂದ್ರಿಯಗಳು ಮುಕ್ತಿಯೊಂದಿಗೆ ಅಳಿದುಹೋಗುತ್ತವೆ, ಆದರೆ ಮನಸ್ಸು ಮಾತ್ರ ನಾಶವಾಗದು.
ಮನಸ್ಸು ಸಪ್ತ ಉಪಾಸಕರ  ( ವೇದಗಳ ಆಚರಣೆಗಳಲ್ಲಿ ತಜ್ಞರು ಹಾಗೂ ವ್ಯಾಖ್ಯಾನಕಾರರು ತಮ್ಮ ಯಾಜ್ಞಿಕದ {ಧಾರ್ಮಿಕ } ಅನುವಾದಗಳ ಬಗೆಗೆ ಅನೇಕ ವೇಳೆ ಸೀಮಿತ ನಿಲುವನ್ನು ಹೊಂದಿರುತ್ತಾರೆ ಮತ್ತು ಆಧ್ಯಾತ್ಮಿಕವನ್ನು  ಹಾಗೂ ಆಧ್ಯಾತ್ಮಿಕದ ಆಳವಾದ ವ್ಯಾಖ್ಯಾನಗಳನ್ನು ಮೇಲಿಂದ ಮೇಲೆ ಕಡೆಗಣಿಸುತ್ತಾರೆಅವರುಗಳು ಈ ಸಪ್ತ ಉಪಾಸಕರ ದಿವ್ಯಕರ್ಮಗಳನ್ನು ಅಗ್ನಿಸ್ಥೋಮದ ಅಗ್ನಿ ವಿಧಿಗಳೆಂದೂ ಹಾಗೂ ಅದರಲ್ಲಿ ಹೋಮದ ಆಚರಣೆ ಮತ್ತು ಪ್ರಾರ್ಥನೆಗಳ ಮೂಲಕ ವಿಧಿಸಿರುವಂತೆ ಸೋಮರಸವನ್ನು ಉಪಯೋಗಿಸುವರುಯೋಗಿಗಳ ಪ್ರಕಾರ ಪ್ರಸ್ತುತ ಸ್ತೋತ್ರದ ಅನುವಾದದ ಪ್ರಕಾರ ಸಪ್ತ ಉಪಾಸಕರು ನಮ್ಮ ಅಂತರಂಗದ ಏಳು ಶಕ್ತಿಗಳು. ) ದಿವ್ಯಕರ್ಮಗಳಿಂದ ವಿಸ್ತರಿಸುತ್ತದೆ.
--- ಆ ವಿಧದ ಸುಂದರವಾದ ಮತ್ತು ದೈವೀ ನಿರ್ಣಯದ ಮನಸ್ಸು ಸದಾ ಶಿವನ ವಿಚಾರಗಳಿಂದ ತುಂಬಿರಲಿ.

ವ್ಯಾಖ್ಯಾನ - 2 :

, ಮಾನವ ಜೀವಿಗಳೇ ! ಮನಸ್ಸು ಅವಿನಾಶಿ, ಪರಮಾತ್ಮನಲ್ಲಿ ಒಂದಾಗಿ, ಯಾವುದರಿಂದ ಕಾಲದ ಮೂರು ವಿಭಾಗಗಳಾದ ಭೂತ, ಭವಿಷ್ಯತ್ ಮತ್ತು ವರ್ತಮಾನಗಳಲ್ಲಿ ಎಲ್ಲ ನೈಜತೆಗಳು ಉಳಿಯುವುದೋ ಅದನ್ನು;
ಮನಸ್ಸು ಅಗ್ನಿಯ ದಿವ್ಯಕರ್ಮವಾದ ಅಗ್ನಿಸ್ಥೋಮ ಹಾಗೂ ಪ್ರಾಯೋಗಿಕ ವಿಜ್ಞಾನದ ಉಪಯೋಗಳ ಅನ್ವಯಿಸುವಿಕೆಯಿಂದ ವಿಸ್ತಾರವಾಗುತ್ತದೆ,
ಆ ನನ್ನ ಮನಸ್ಸು ಮೋಕ್ಷದೆಡೆಗಿನ ನಿರ್ಧಾರದಿಂದ ಕೂಡಿದ ಯೋಗದೊಂದಿಗೆ ವಿಲೀನವಾಗಲಿ.

, ಮಾನವ ಜೀವಿಗಳೇ ! ಮನಸ್ಸು ಪಳಗಿದ ಮತ್ತು ಮುಖ್ಯ ವಿಧಾನದೊಂದಿಗೆ  ಹಾಗೂ ಯೋಗದ ಉಪಮಾರ್ಗಗಳೊಂದಿಗೆ ಸಾಧಿಸಿ, ತ್ರಿಕಾಲಗಳ ( ಯೋಗಿಗಳನ್ನು ಅನೇಕವೇಳೆ ತ್ರಿಕಾಲಜ್ಞ ಅಥವಾ ತ್ರಿಕಾಲ ದರ್ಶಿನ್ಪ್ರಸ್ತುತವನ್ನು ಮೀರಿ ಎಲ್ಲ ತ್ರಿಕಾಲಗಳನ್ನೂ ಅರಿಯಬಲ್ಲವ, ಎಂಬುದಾಗಿ ಉಲ್ಲೇಖಿಸಲಾಗಿದೆ .) ಜ್ಞಾತ್ರೃ ಹಾಗೇ ಸಮಸ್ತ ಸೃಷ್ಟಿಯ ಮತ್ತು ಈಡೇರಿಸುವ ಕ್ರಿಯೆಗಳ ಮಾಧ್ಯಮ, ವಾಸ್ತವಿಕ ಪೂಜೆ ಮತ್ತು ಜ್ಞಾನಗಳೊಂದಿಗೆ ತಿಳಿಯುವುದು
---- ಆ ಮನಸ್ಸನ್ನು ಪ್ರೀತಿ ಮತ್ತು ದಯೆಗಳೆಡೆಗೆ ಹರಿಸು.

ಶ್ಲೋಕ - 5 - ಸಂಸ್ಕೃತದಲ್ಲಿ :

ಯಸ್ಮಿನ್ ಋಕ್ಸಾಮ ಯಜೂಂಷಿ
ಯಸ್ಮಿನ್ ಪ್ರತಿಷ್ಠಿತಾಃ ರಥನಾಭಾವಿವಾರಾಃ
ಯಸ್ಮಿನ್ಚಿತ್ತಂ ಸರ್ವಮೋತಂ ಪ್ರಜಾನಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ರಥಗಾಲಿಯರೆಗಳೊಲು
ವೇದಗಳೇನನಾಶ್ರಯಿಸಿಹವೊ
ಯಾರ ಚಿತ್ತವೆಲ್ಲರ ಬುದ್ಧಿಯನಾಳ್ವುದೋ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಆ ಮನಸ್ಸು ರಥದ ಚಕ್ರದ ಕೇಂದ್ರ ಹಾಗೂ ಅದರ ಕಡ್ಡಿಗಳೆ ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಮತ್ತು ಚಕ್ರದ ಅಚ್ಚು ಜ್ಞಾನವನ್ನು ಪ್ರತಿನಿಧಿಸುತ್ತದೆ ಹಾಗೂ ಇಂದ್ರಿಯಗಳೆಂಬ ಅಶ್ವಗಳು ರಥವನ್ನು ಈ ರೀತಿಯಾಗಿ ಎಳೆಯುತ್ತಿದೆ. ಆ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಯಾವ ಮನಸ್ಸಿನಲ್ಲಿ ಋಗ್ವೇದದ ಶ್ಲಾಘನೆಗಳು, ಸಾಮವೇದದ ಸ್ತೋತ್ರ ಮತ್ತು ಕೀರ್ತನೆಗಳು ಮತ್ತು ಯಜುರ್ವೇದ ಧರ್ಮಾಚರಣೆಗೆ ಸಂಬಂಧಿಸಿದ ಗಾಯನಗಳು ಸ್ಥಾಪಿಸಲ್ಪಟ್ಟಿರುವುದೋ --- ಆ ಮನಸ್ಸಿನ ಸ್ವಾಸ್ಥ್ಯ ಮತ್ತು ಆರೋಗ್ಯದೊಂದಿಗೆ ವೇದಗಳ ಮೂರು ಹಂತದ ಜ್ಞಾನವು ಮತ್ತು ಆ ಮನಸ್ಸಿನಲ್ಲಿ ಸಮಸ್ತ ವಿಶ್ವವೂ ಸ್ಥಾಪಿಸಲ್ಪಟ್ಟಿರುವುದು.

ಛಾಂದೋಗ್ಯೋಪನಿಷತ್ತಿನ ಒಂದು ಮಂತ್ರದ ಪ್ರಕಾರ :
" ! ಶಾಂತಿ ಹಾಗೂ ಪ್ರೀತಿಯ ಮನಸ್ಸು ಆಹಾರದಿಂದಾಗಿದೆ". 6.1-16

ವೇದಮಂತ್ರಗಳನ್ನು ಪಠಿಸುವ ಶಕ್ತಿಯು ಮನಸ್ಸಿನ ಆರೋಗ್ಯ ಮತ್ತು ಸ್ವಸಾಮರ್ಥ್ಯಗಳಿಂದಾಗಿ ಮಾತ್ರವೆಂದು ವಿವರಿಸಲಾಗಿದೆ.
ಅದು ಹೇಗೆ ಸಾಧ್ಯ ? ಈ ಕೆಳಗಿನ ಒಂದು ದೃಷ್ಟಾಂತವನ್ನು ಗಮನಿಸೋಣ :

ರಥದ ಚಕ್ರದ ಮಧ್ಯಬಾಗದಲ್ಲಿ ಕಡ್ಡಿಗಳನ್ನು ಸ್ಥಾಪಿಸಿರುವಂತೆ, ಪದಗಳ ಜಾಲವೂ ಮನಸ್ಸಿನಲ್ಲಿ ಸ್ಥಾಪಿಸಲ್ಪಟ್ಟಿದೆ.
ಮುಂದುವರೆದು, ವಸ್ತ್ರದಲ್ಲಿ ದಾರಗಳ ಸಮೂಹವನ್ನು ಹೆಣೆದು ನೇಯ್ದಿರುವಂತೆ ಎಲ್ಲ ವಿಷಯಗಳು / ವಸ್ತುಗಳ ಬಗೆಗಿನ ನಿಖರವಾದ ಮತ್ತು ಸುಸಂಗತವಾದ ಜೀವಿಗಳ ಅರಿವಿನ ಬಗೆಗಿನ ಸಂಪೂರ್ಣ ಜ್ಞಾನವು ಮನಸ್ಸಿನಲ್ಲಿ ನಿಖರವಾಗಿ ಹೆಣೆದು ಅದರಲ್ಲೇ ಸ್ಥಳಾಂತರಿಸಲಾಗಿದೆ.

ಜ್ಞಾನವು ಅಂತರಂಗದಿಂದ ಉದಯಿಸುವುದು ಮನಸ್ಸಿನ ಸ್ವಾಸ್ಥ್ಯದ ಸ್ಥಿತಿ ಮತ್ತು ಸ್ವಸ್ಥಿರತೆಯ ಮೇಲೆ ಮಾತ್ರ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸಬೇಕು; ಆತಂಕ ಮತ್ತು ಗೊಂದಲದಿಂದ ಕೂಡಿದ ಮನಸ್ಸಿನಲ್ಲಿ ಜ್ಞಾನವು ಇರುವುದಿಲ್ಲ.
ಅಂಥಹ ನನ್ನ ಮನಸ್ಸು ಸದಾ ಶಿವ-ಸಂಕಲ್ಪದಲ್ಲಿ, ಶಮನಗೊಳಿಸಿದ ಕ್ರಿಯೆಗಳಲ್ಲಿ ಹಾಗೂ ಎಲ್ಲ ಕಾರ್ಯಾಚರಣೆಗಳೂ ಶಾಂತಿ ಹಾಗೂ ನೆಮ್ಮದಿಯಿಂದಿರುವುದು.

ವ್ಯಾಖ್ಯಾನ - 2 :

ಋಗ್, ಯಜುಸ್, ಸಾಮ ಮತ್ತು ಅಥರ್ವ ವೇದಗಳು ಸ್ಥಿರಗೊಳಿಸಿದ ಮನಸ್ಸು ರಥದ ಚಕ್ರದ ಕೇಂದ್ರದಲ್ಲಿನ ಕಡ್ಡಿಗಳಂತೆ ಎಲ್ಲ ದಿಕ್ಕಿನಿಂದಲೂ ಸ್ಥಿರವಾಗಿದೆ,
ಮನಸ್ಸಿನಲ್ಲಿ ಜೀವಿಗಳ ಬಗೆಯ ಅರಿವು ಎಲ್ಲ ವಿಷಯ / ವಸ್ತುಗಳು ಹೇಗೆ ಕಂಠೀಹಾರದ ದಾರದಲ್ಲಿ ಒಡವೆಗಳು ಹೆಣೆದುಕೊಂಡಿರುವುದೋ ಹಾಗೆ ಹೆಣೆದುಕೊಂಡಿರುವುದು 
--- ಅಂಥಹ ನನ್ನ ಮನಸ್ಸು , ವೇದಗಳಂಥ ನೈಜ ಗ್ರಂಥಗಳ ಬಗೆಗೆ ವಿವರಿಸುವ ಧೃಢನಿಶ್ಚಯವು ಸದಾ ತುಂಬಿರಲಿ.

! ಮಾನವ ಜೀವಿಗಳೆ, ನೀವು ಜ್ಞಾನದಿಂದ ಪರಿಶುದ್ಧರಾಗಿ ಮತ್ತು ಧಾರ್ಮಿಕ ವರ್ತನೆಗಳಾದ ಆಂತರಿಕ ಸಾಧನೆಗಳು, ಮನಸ್ಸುಗಳಿಂದ ವರ್ತಿಸುವುದು ಉತ್ತಮವಾದದ್ದು -
--- ಅವುಗಳ ಸ್ವಾಸ್ಥ್ಯ ಮತ್ತು ಸ್ವಸ್ಥಿರತೆ ಮಾತ್ರವೇ  ವೇದಗಳ ಬಗ್ಗೆ ಸ್ಥಾಪಿಸಿ ಮತ್ತು ಸದ್ವರ್ತನೆಯ ವಿಧಾನಗಳ ವಿವೇಕವು ಸೇರಿಕೊಂಡು ಜ್ಞಾನಗಳ ವೈಜ್ಞಾನಿಕ ಅಡಿಪಾಯಗಳಿಗೆ ಕಾರಣವು.

ಶ್ಲೋಕ - 6 - ಸಂಸ್ಕೃತದಲ್ಲಿ :

ಸುಸಾರಥಿರಶ್ವಾನಿವ ಯನ್ಮನುಷ್ಯಾಣ
ನೇನೀಯತೇಭೀಶುಭಿರ್ವಾಜಿನ ಇವಾ
ಹ್ರೌಪ್ರತಿಷ್ಠಿತಂ ಯದಜಿರಂ ಜವಿಷ್ಠಾಂ
ತನ್ಮೇ ಮನಃ ಶಿವಸಂಕಲ್ಪಮಸ್ತು
ಕನ್ನಡದಲ್ಲಿ :

ಮನುಜರನು ರಥಹಯ ನಿಯಂ-
ತ್ರಿಸುವಸಾರಥಿಯೊಲಾರು ನಿಯ -
ಮಿಪರೋ ಸರ್ವವ್ಯಾಪಿಯಹ
ಆ ಪರಮ ಕೃಪೆಯಿಂದೆನ್ನಮನ ಶುಭವ ಚಿಂತಿಸಲಿ

ವಿವರಣೆ :

ಹೇಗೆ ನುರಿತ ಸಾರಥಿಯು ಅಶ್ವಗಳನ್ನು ತನ್ನ ಆದೇಶದಂತೆ ಓಡಿಸಿ ಅವುಗಳು ತಾನೆಲ್ಲಿಗೆ ಹೋಗಬೇಕೋ ಅಲ್ಲಿಗೇ ಅವುಗಳನ್ನೂ ಕೊಂಡೊಯ್ಯುವಂತೆ ಮನಸ್ಸೂ ಕೂಡಾ ಮನುಷ್ಯನನ್ನು ಅವನ ಆಸೆಗಳೆಡೆಗೆ ಮತ್ತು ಪಶು ಪ್ರವೃತ್ತಿಗಳನ್ನು ನಿರ್ಬಂಧಿಸುವುದರೆಡೆಗೆ ಮಾರ್ಗದರ್ಶನ ಮಾಡಿ ಅದು ಹೃದಯದಲ್ಲಿ ನೆಲೆಸಿ ಅವನ ಅಮರತ್ವ ಮತ್ತು ಪ್ರಕ್ಷುಬ್ದತೆಗಳಿಂದ ಬಿಡುಗಡೆ ಹೊಂದಿದಂಥಹ ನನ್ನ ಮನಸ್ಸು ಸದಾ ಒಳ್ಳೆಯ ಭಾವನೆಗಳನ್ನೇ ಹೊಂದಿರಲಿ.

ವ್ಯಾಖ್ಯಾನ :

ಕೇವಲ ಮನಸ್ಸೇ ಮನುಷ್ಯನನ್ನು (ವ್ಯಾಖ್ಯಾನಕಾರರ ಪ್ರಕಾರ ಮನುಷ್ಯ ಎಂಬುದು ಮೂಲದಲ್ಲಿ ಎಲ್ಲ ಜೀವಿಗಳನ್ನೂ ಒಳಗೊಂಡ ಕೇವಲ ಒಂದು ಸಾಮಾನ್ಯ ಪದ ಮಾತ್ರ ) ಇಲ್ಲಿಂದ ಅಲ್ಲಿಗೆ ಮಿತಿಮೀರಿ ಮನಸ್ಸಿನ ಪ್ರೇರೇಪಣೆಯಂತೆ ನಡೆಸುತ್ತದೆ.
ಅದು ಹೇಗೆ ? ಇಲ್ಲಿದೆ ಒಂದು ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಚಾವಟಿಯ ಮೂಲಕ ನಡೆಸುತ್ತಾನೆ.
ಎರಡನೇ ಉದಾಹರಣೆ : ನುರಿತ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ಲಗಾಮಿನ ಸಹಾಯದಿಂದ ನಡೆಸುವನು.
ಇಲ್ಲಿ ಎರಡು ಉದಾಹರಣೆಗಳಿವೆ. ಮೊದಲನೇ ಉದಾಹರಣೆಯಲ್ಲಿ "ನಡೆಸುವುದು" ಮತ್ತು ಎರಡನೆಯದರಲ್ಲಿ " ಹತೋಟಿಯಲ್ಲಿಟ್ಟುಕೊಳ್ಳುವುದು". ಹೇಗೆ ಸಾರಥಿಯು ಅಶ್ವಗಳನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವನೋ ಅದೇ ರೀತಿ ಮನಸ್ಸು ಕೂಡಾ ಜೀವಿಯನ್ನು ಹತೋಟಿಯಲ್ಲಿಟ್ಟುಕೊಂಡು ನಡೆಸುವುದು.
ಈ ವಿಧದಲ್ಲಿ ವಾಸಿಸಿರುವ ಮನಸ್ಸು, ಹೃದಯದಲ್ಲಿ ಸ್ಥಾಪಿಸಿದೆ. ಏಕೆಂದರೆ ಇದು ಹೃದಯದಲ್ಲಿ ಮಾತ್ರ ಕಂಡುಬರುವುದು ಮತ್ತು ಅರಿವಾಗುವುದು. ( ಇದು ಯೋಗಿಗಳು ವಿಷೇಶವಾದ ಧ್ಯಾನ ಮಾರ್ಗದ ಮೂಲಕ ಮನಸ್ಸನ್ನು ಅರಿತುಕೊಳ್ಳುವರು).
ಈ ಮನಸ್ಸು ಬಾಲ್ಯ, ಯೌವನ ಮತ್ತು ವಾರ್ಧಕ್ಯದ ಸ್ಥಿತಿಗಳಲ್ಲಿಯೂ ಸಹ ಮಾರ್ಪಾಡಾಗದೇ ಇರುವುದರಿಂದ ಅದು ಮುಪ್ಪಾಗದು.
ಈ ಕೆಳಗೆ ವಿವರಿಸಿರುವ ಉಲ್ಲೇಖದಂತೆ ಇದು ಅತ್ಯಂತ ವೇಗದ ಶಕ್ತಿ : -
" ಗಾಳಿಗಿಂತ ತ್ವರಿತವಾದದ್ದು ಬೇರೊಂದಿಲ್ಲ; ಮನಸ್ಸಿಗಿಂತ  ವೇಗವಾದದ್ದು ಮತ್ತೊಂದಿಲ್ಲ".

ಆ ವಿಧದ ಸುಂದರವಾದ ಮತ್ತು ದೈವೀ ನಿರ್ಣಯದ ಮನಸ್ಸು ಸದಾ ಶಿವನ ವಿಚಾರಗಳಿಂದ ತುಂಬಿರಲಿ.

ವ್ಯಾಖ್ಯಾನ - 2 :

ಹೇಗೆ ನುರಿತ ಮತ್ತು ಚುರುಕಾದ ಸಾರಥಿಯು ಕಡಿವಾಣದ ಸಹಾಯದಿಂದ ಕುದುರೆಗಳನ್ನು ಎಲ್ಲ ದಿಕ್ಕುಗಳೆಡೆಗೂ ಓಡಿಸುವನೋ ಅದೇ ರೀತಿ ಮನಸ್ಸೂ ಸಹ ಜೀವಿಗಳಾದ ಮನುಷ್ಯರನ್ನು ವೇಗವಾಗಿ ಎಲ್ಲ ದಿಕ್ಕುಗಳೆಡೆಗೂ ಓಡಿಸುವುದು.
ಹೇಗೆ ಸಾರಥಿಯು ವೇಗವಾಗಿ ಚಲಿಸುತ್ತಿರುವ ಕುದುರೆಗಳನ್ನು ಲಗಾಮಿನ ಸಹಾಯದಿಂದ ಹತೋಟಿಯಲ್ಲಿಟ್ಟುಕೊಂಡು ಅವುಗಳನ್ನು ಹತೋಟಿಯಲ್ಲಿಡುವನೋ ಅದೇ ರೀತಿ ಮನಸ್ಸೂ ಸಹ.
ಈ ಮನಸ್ಸು ಹೃದಯದಲ್ಲಿ ಸ್ಥಾಪಿಸಲ್ಪಟ್ಟು, ವಿಷಯಗಳೆಡೆಗೆ / ಗುರಿಗಳೆಡೆಗೆ  ವಯಸ್ಸಾದ ಪ್ರಕ್ರಿಯೆಯಂತೆ ಮತ್ತು ಇದು ವೇಗವಾದಂತೆ ಯಾವುದೇ ಶರತ್ತುಗಳಿಲ್ಲದೇ  ಪ್ರಚೋದಿಸುವುದು.
ಅಂಥಹ ನನ್ನ ಮನಸ್ಸು ಮಂಗಳಕರಕ್ಕೆ ಸಮಾನವಾದ ಸಂಯಮದಲ್ಲಿ ಒಲವನ್ನು ಕಂಡುಕೊಳ್ಳಲಿಈ ಶ್ಲೋಕದಲ್ಲಿ ಎರಡು ಉಪಮೆಗಳಿವೆ.
ಮನಸ್ಸು ಗತ್ಯಂತರವಿಲ್ಲದೆ ಮನುಷ್ಯನನ್ನುಹೇಗೆ ಸಾರಥಿಯು ಕುದುರೆಗಳನ್ನು ಕಡಿವಾಣದ ಸಹಾಯದೊಂದಿಗೆ ಕರೆದೊಯ್ಯುತ್ತಾನೋ, ಹಾಗೆ ಅವನ ಆಸಕ್ತಿಯ ವಿಷಯಗಳೆಡೆಗೆ ಮತ್ತು ಚಟಗಳೆಡೆಗೆ ಮಾರ್ಗದರ್ಶನ ಮಾಡುವುದು. ಮೂರ್ಖರು ಈ ವಿಧದ ಮನಸ್ಸನ್ನು ಅನುಸರಿಸುವರು ಆದರೆ ಬುದ್ಧಿವಂತರು ಅದನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳುವರು.

ಈ ಮನಸ್ಸು -
--- ಪರಿಶುದ್ಧವಾಗಿದ್ದಾಗ ಸುಖ ಹಾಗೂ ಸಂತೋಷಕ್ಕೆ ಕಾರಣವಾಗುತ್ತದೆ ಮತ್ತು ಮಲಿನವಾದಾಗ ದುಃಖಕ್ಕೆ ಕಾರಣವಾಗುವುದು, ಮತ್ತು
--- ಈ ಮನಸ್ಸನ್ನು ಗೆದ್ದಾಗ, ಅದು ಸಾಧನೆ ಮತ್ತು ಸಿದ್ಧಿಗಳನ್ನು ನೀಡುತ್ತದೆ; ಗೆಲ್ಲಲಾಗದಿದ್ದಾಗ ಇದು ವೈಫಲ್ಯಗಳನ್ನು ಉಂಟುಮಾಡುತ್ತದೆ.
ಈ ವಿಧದ ವರ್ತನೆಗಳು ಮನುಷ್ಯನನ್ನು ತನ್ನೆಡೆಗೆ ಸೆಳೆದು ಮತ್ತು ಈ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು.

ಲೇಖನದ ಮೂಲಗಳು :
ಸಂಸ್ಕೃತ ಹಾಗೂ ಕನ್ನಡ ಶ್ಲೋಕಗಳು : ಶ್ರೀ.ಬಿ.ಎಸ್.ಚಂದ್ರಶೇಖರ್ ಅವರ - ಸವಿಗನ್ನಡ ಸ್ತೋತ್ರಚಂದ್ರಿಕೆ
ವಿವರಗಳು : http://hara-hara-mahaadev.blogspot.in/2019/02/shiva-sankalpa-suktam.html
ಪ್ರಸ್ತಾವನೆ ಹಾಗೂ ವ್ಯಾಖ್ಯಾನ : http://ahymsin.org/main/swami-veda-bharati/shiva-sankalpa-sukta.html
ಆಂಗ್ಲ ಭಾಷೆಯಲ್ಲಿನ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ ಪಡಿಸಿದವರು : ಗುರುಪ್ರಸಾದ್ ಹಾಲ್ಕುರಿಕೆ.











Comments

Popular posts from this blog

ಮಂತ್ರಪುಷ್ಪ (ತೈತ್ತರೀಯ ಆರಣ್ಯಕ)

ಪುರುಷ ಸೂಕ್ತ